Sunday 15 January 2012

ಪುಣ್ಯಕೋಟಿ ಎಂಬ ಗೋವಿನ ಹಾಡು

ಪ್ರತಿ ಸರಿ ಸಂಕ್ರಾತಿ ದಿನ ನನಗೆ ನೆನಪಾಗೋ ಹಾಡು ಇದು..ಆ ಕಾಲದಲ್ಲಿ ಪ್ರಾಣಿಗಳಿಗೆ ಇದ್ದ ನಂಬಿಕೆ ಈಗಿನ ಕಾಲದಲ್ಲಿ ಮನುಷ್ಯನಿಗೆ ಮನುಷ್ಯನ ಮೇಲೆ ಇಲ್ಲ..ಎಲ್ಲದಕ್ಕೂ guarantee ಬೇಕೇ ಬೇಕು..ಕೊಟ್ಟ ಮಾತು ಉಳಿಸೋ ಜನರು ತುಂಬ ಕಮ್ಮಿ ಆಗಿದ್ದರೆ, ಆ ಗೊಲ್ಲ ನಿಗೂ ಕೂಡ ತನ್ನ ಜೊತೆ ಇದ್ದ ಕರು ಗಳ ಹೆಸರು ಗೊತ್ತು, ಪ್ರತಿ ಜಾಗದ ಹೆಸರು ಗೊತ್ತು, ಆದರೆ ಈಗ ನಮಗೆ ಪಕ್ಕದ ಮನೆಯವರ ಹೆಸರು ಗೊತ್ತಿಲ್ಲ, ನಮ್ಮ ಜೊತೆ ಕೆಲಸ ಮಾಡೋ ಜನರ ಹೆಸರು ಗೊತ್ತಿಲ್ಲ...ಎಲ್ಲ google ಮಯವಾಗಿದೆ...ಈಗ ಪುಣ್ಯಕೋಟಿ ಯಂಥ ಮಾತು ಉಳಿಸಿ ಕೊಳ್ಳೋ ಜನರು ಇಲ್ಲ, ಕಾಳಿಂಗ ನಂತೆ ತಾಳ್ಮೆ ಇಂದ ಕಾಯೋ ಜನರು ಇಲ್ಲ...ಹುಲಿ ಯಂಥ ದುಷ್ಟ ಕೂಡ ತನ್ನ ಹಸಿವನ್ನು ತಡೆದು ಕಾದಿದ್ದು ಈಗಿನ ಕಾಲದ ಮಕ್ಕಳಿಗೆ ಸುಳ್ಳನಿಸುತ್ತೆ... ಈ ಹಾಡು ೩ ನೇ ಕ್ಲಾಸ್ ನಲ್ಲಿ ಓದಿದ್ದು, ದಿನ ರಾತ್ರಿ ಅತ್ತು ಅಮ್ಮ ನನ್ನನ್ನು  ಸಮಾದಾನ ಮಾಡಿದ್ದು, ನೆನಪಿದೆ.. ಈವಾಗಲು ನೆನಸಿಕೊಂಡರೆ ತುಂಬ ಅಳು  ಬರುತ್ತೆ....ಮನಸ್ಸಿಗೆ ಸಣ್ಣ ವಯಸ್ಸಿನಲ್ಲಿ ತುಂಬ ನಾಟಿದ ಹಾಡು ಇದು, ಸತ್ಯ ಬಿಟ್ಟು ಬೇರೇನೂ ಹೇಳಬಾರದು ಎಂದು ಅಮ್ಮ ಕಲಿಸಿದಾಗ ಹೇಳಿ ಕೊಟ್ಟ ಹಾಡು ಇದು...ಕೊಟ್ಟ ಮಾತು ಜೀವ ಕೊಟ್ಟಾದರೂ ಉಳಿಸಿಕೊಳ್ಳ ಬೇಕು ಎಂದು ಅಮ್ಮ  ಹೇಳಿ ಕೊಟ್ಟಾಗ ಹೇಳಿ ಕೊಟ್ಟ ಹಾಡು ಇದು... ಜೀವನದ ಪಾಠ  ಕಲಿಸಿ ಕೊಟ್ಟ ಹಾಡು ಇದು...



ಧರಣಿ ಮಂಡಲ ಮಧ್ಯದೊಳಗೆ
ಮೆರೆಯುವುದೈವತ್ತಾರು ದೇಶದಿ
ಇರುವ ಕಾಳಿಂಗನೆಂಬ ಗೊಲ್ಲನು
ಪರಿಯ ನಾನೆಂತು ಪೇಳ್ವೆನು.

ಗಿರಿಗಳೆಡೆಯಲಿ ಅಡವಿ ನಡುವೆ
ತುರುವ ದೊಡ್ಡಿಯ ಮಾಡಿಕೋಂಡು
ಮೆರೆವ ಕಾಳಿಂಗನೆಂಬ ಗೊಲ್ಲನ
ಸಿರಿಯ ನಾನೆಂತು ಪೇಳ್ವೆನು.

ಗೊಲ್ಲದೊಡ್ಡಿಯೊಳಿರುವ ಹಸುಗಳು
ಎಲ್ಲ ಬೆಟ್ಟದ ಮೇಲೆ ಮೇಯುತ
ಹುಲ್ಲನೊಳ್ಳೆಯ ನೀರ ಕುಡಿಯುತ
ಅಲ್ಲಿ ಮೆರೆದುವರಣ್ಯದಿ.

ಕರುಗಳನು ನೆನೆನೆನೆದು
ಹಸುಗಳು ಕೊರಳ ಘಂಟೆ ಢಣಿರು
ಢಣಿರನೆ ಪರಿದು ಲಂಘ್ಹಿಸಿ ಚಿಮ್ಮಿ
ನೆಗೆಯುತ ಮರಳಿ ಬಂದವು ದೊಡ್ಡಿಗೆ.

ತಮ್ಮ ತಾಯನು ಕಂಡು ಕರುಗಳು
ಅಮ್ಮಾ ಎಂದು ಕೂಗಿ ನಲಿಯುತ
ಸುಮ್ಮಾನದೊಳು ಮೊಲೆಯನುಂಡು
ನಿರ್ಮಲದೊಳು ಇದ್ದವು.

ಉದಯ ಕಾಲದೊಳೆದ್ದು ಗೊಲ್ಲನು
ನದಿಯ ಸ್ನಾನವ ಮಾಡಿಕೊಂಡು
ಮುದದಿ ತಿಲಕವ ಹಣೆಯೊಳಿಟ್ಟು
ಚದುರ ಶಿಖೆಯನು ಹಾಕಿದ.

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲಗೌಡನು
ಬಳಸಿ ಬರುವ ತುರುಗಳನ್ನು
ಬಳಿಗೆ ಕರೆದನು ಹರುಷದಿ.

ಗಂಗೆ ಬಾರೇ ಗೌರಿ ಬಾರೇ
ತುಂಗಭದ್ರೆ ನೀನು ಬಾರೇ
ಕಾಮಧೇನು ನೀನು ಬಾರೆಂದು
ಪ್ರೇಮದಲಿ ಗೊಲ್ಲ ಕರೆದನು.

ಗೊಲ್ಲ ಕರೆದಾ ಧ್ವನಿಯ ಕೇಳಿ
ಎಲ್ಲ ಪಶುಗಳು ಬಂದುವಾಗ
ಚೆಲ್ಲಿ ಸೂಸಿ ಪಾಲ ಕರೆದು
ಅಲ್ಲಿ ತುಂಬಿತು ಬಿಂದಿಗೆ.

ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಬುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿ ಹಸಿದು
ಬೆಟ್ಟದ ಕಿಬ್ಬಿಯೊಳು ತಾನಿದ್ದನು.

ಸಿಡಿದು ರೋಷದಿ ಮೊರೆಯುತಾ ಹುಲಿ
ಘುಡುಘುಡಿಸಿ ಭೋರಿಡುತ ಛಂಗನೆ
ತುಡುಕಲೆರಗಿದ ರಭಸಕಂಜಿ
ಚೆದರಿ ಹೋದವು ಹಸುಗಳು.

ಪುಣ್ಯಕೋಟಿ ಎಂಬ ಗೋವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
 ಚೆಂದದಿ ತಾ ಬರುತಿರೆ.

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು.

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿ ಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು.

 ಒಂದು ಬಿನ್ನಹ ಹುಲಿಯೆ ಕೇಳೈ
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ.

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯನಾಡುವೆಯೆಂದಿತು.

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು.

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆಯಿತ್ತು
ಕಂದನಿನ್ನನು ನೋಡಿ ಹೋಗುವೆ
ನೆಂದು ಬಂದೆನೆ ದೊಡ್ಡಿಗೆ.

ಅಮ್ಮ ನೀನು ಸಾಯಲೇಕೆ
ನನ್ನ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲೆನುತ್ತ
ಅಮ್ಮನಿಗೆ ಕರು ಹೇಳಲು.

ಕೊಟ್ಟ ಭಾಷೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟಕಡೆಗಿದು ಖಂಡಿತ.

ಆರ ಮೊಲೆಯನು ಕುಡಿಯಲಮ್ಮ
ಆರ ಸೇರಿ ಬದುಕಲಮ್ಮ
 ಆರ ಬಳಿಯಲಿ ಮಲಗಲಮ್ಮ
ಆರು ನನಗೆ ಹಿತವರು.

ಅಮ್ಮಗಳಿರ ಅಕ್ಕಗಳಿರ
ನಮ್ಮ ತಾಯೊಡಹುಟ್ಟುಗಳಿರ
ನಿಮ್ಮ ಕಂದನೆಂದು ಕಾಣಿರಿ ತ
ಬ್ಬಲಿಯನೀ ಕರುವನು.

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು.

ಕಟ್ಟ ಕಡೆಯಲಿ ಮೇಯಬೇಡ
ಬೆಟ್ಟದೊತ್ತಿಗೆ ಹೋಗ ಬೇಡ
ದುಷ್ತವ್ಯಾಘ್ರನು ಹೊಂಚುತಿರುವನು ನ
ಟ್ಟನಡುವಿರು ಕಂದನೆ.

ತಬ್ಬಲಿಯು ನೀನಾದೆ ಮಗನೆ
 ಹೆಬ್ಬುಲಿಯ ಬಾಯನ್ನು ಹೊಗುವೆನು
 ಇಬ್ಬರಾ ರುಣ ತೀರಿತೆಂದು
ತಬ್ಬಿ ಕೊಂಡಿತು ಕಂದನ.

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು.

 ಖಂಡವಿದೆ ಕೋ ಮಾಂಸವಿದೆ ಕೋ
ಗುಂಡಿಗೆಯ ಬಿಸಿ ರಕ್ತವಿದೆಕೋ
ಚಂಡ ವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು.

ಪುಣ್ಯಕೋಟಿಯ ಮಾತ ಕೇಳಿ
ಕಣ್ಣ ನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು.

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು.

5 comments:

  1. ಪ್ರಾಥಮಿಕ ಶಾಲೆಯಲ್ಲಿ ನಾವು ಕಲಿತಿದ್ದ ಹಾಡಿದು. ಮತ್ತೆ ನೆನಪಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಸಂಕ್ರಾಂತಿಯ ಶುಭಾಶಯಗಳು.

    ReplyDelete
  2. ನಿಮ್ಮ ಪಿಸುಮಾತಿಗೆ ಹೊಸ ಓದುಗ:-) ಎಲ್ಲಾ ಸರಿ ಆದರೆ ನೀವು ಹೇಳಿದಂತೆ ಆಗಿನದ್ದೆಲ್ಲಾ ಸಂಪೂರ್ಣವಾಗಿ ಇಂದು ಕಳೆದು ಹೋಗಿಲ್ಲವೇನೋ ಎಂಬ ಆಶಾಭಾವನೆ ಮನದಲ್ಲಿ ಇನ್ನೂ ಇದೆ. ಒಂದು ಗಮನಿಸ ತಕ್ಕದ್ದು.. ಆಗಲೂ ಆ ಹಿಂಡಿನಲ್ಲಿ ಒಂದೇ ಪುಣ್ಯಕೋಟಿ ಇದ್ದದ್ದು ಈಗಲೂ ಸಹ :-)

    ReplyDelete
    Replies
    1. ಹಾ..!! ಅಲ್ಲಿ ಇಲ್ಲಿ ಕೆಲವರು ಇದ್ದಾರೆ..!!! ನಮ್ಮಂಥವರು..!!!! ನಿಮ್ಮಂಥವರು...!!!!!!!!

      Delete
  3. who wrote this poem and When? Whether any research has been made on the author of this poem?

    ReplyDelete